Saturday, 4 February 2017

ಹೂಲಿ - News Article 3

ಐತಿಹಾಸಿಕ ದೇವಾಲಯಗಳ ಬೀಡು ಹೂಲಿ.

ಕಾಶಿಗಿದಂ ಮಿಗಿಲು ಕೇದಾರಕ್ಕಿಂತಧಿಕ ಶ್ರೀಶೈಲಕ್ಕಂ ಮೇಲು ಹಂಪಿಗಿದಂ ಪೆರ್ಚು ವೀರಶೈವಾಚಾರ ಸಂಪನ್ನರಿಂ ವಿಪುಳ ವೀರ ಮಾಹೇಶ್ವರ ಸಂದೋಹದಿಂ ಪರಮವೀರ ನಿಷ್ಠರಿಂ ದುಷ್ಟ ನಿಗ್ರಹ ಶಿಷ್ಟ ಪರಿಪಾಲರಿಂ ಮಾರರಿಪು ಪೌರಾಣ ಶಾಸ್ತ್ರ ಕಾವ್ಯಗಳಂ ಚಾರು ಸದ್ಭಕ್ತಿಯಿಂ ಕೇಳಿ ಉತ್ಸಾಹಗೈವ ವೀರಭಕ್ತ ಪ್ರತೀತಿಯಿಂ ದೊರೆತಪ್ಪುದಾ ಶಿವನಕೊರಳಮಾಲೆ ಪೂಮಾಲೆ ಹೂಲಿ ಗುರುರಾಜ ಚರಿತ್ರೆ

ಇತಿಹಾಸ ಮತ್ತು ಪುರಾಣ ಶಾಸ್ತ್ರಗಳಲ್ಲಿ ವರ್ಣಿತವಾದ ನೂರೊಂದು ದೇವಾಲಯ, ಬಾವಿಗಳನ್ನು ಹೊಂದಿದ ಗ್ರಾಮ ಹೂಲಿ. ಇದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಐತಿಹಾಸಿಕ ಸ್ಥಳ. ಇದನ್ನು ಬದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಲಚೂರಿ ರಾಜರು, ವಿಜಯನಗರದ ಅರಸರು, ಮರಾಠರು ಕಾಲಕಾಲಕ್ಕೆ ತಮ್ಮ ಆಡಳಿತಕ್ಕೆ ಬಳಸಿಕೊಂಡಿರುವುದನ್ನು ಇಲ್ಲಿ ಲಭ್ಯವಾದ ಶಾಸನಗಳು ತಿಳಿಸುತ್ತವೆ. ಪ್ರಮುಖ ಸಾಂಸ್ಕೃತಿಕ ನೆಲೆಯಾಗಿ, ಸಾವಿರ ಪಂಡಿತರಿಂದ ಶೋಭಿಸಿದ ಅಗ್ರಹಾರವಾಗಿದ್ದ ಹೂಲಿಯ ದೇವಾಲಯಗಳು ತಮ್ಮ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ನೋಡಿ ಎನ್ನುತ್ತ ಇಡೀ ಗ್ರಾಮದೆಲ್ಲೆಡೆ ವ್ಯಾಪಿಸಿವೆ.
ಹೂಲಿ ಗ್ರಾಮ ಸವದತ್ತಿಯಿಂದ ಪೂರ್ವಕ್ಕೆ ಸುಮಾರು ಒಂಬತ್ತು ಕಿ.ಮೀ ಅಂತರದಲ್ಲಿದ್ದು ಸವದತ್ತಿಯಿಂದ ರಾಮದುರ್ಗ, ಜಮಖಂಡಿ, ವಿಜಾಪುರಗಳಿಗೆ ಸಂಚರಿಸುವ ಎಲ್ಲ ಬಸ್‌ಗಳ ನಿಲುಗಡೆ ಹೊಂದಿದ್ದು. ಕೃತಯುಗದಲ್ಲಿ ಕಾರ್ತವೀರ್ಯಾರ್ಜುನನ ರಾಜಧಾನಿಯೆಂದೂ ಎಲ್ಲಮ್ಮದೇವಿ ಚರಿತ್ರೆಯಲ್ಲಿ ಉಲ್ಲೇಖಿತವಾದ ಹೂಲಿಯನ್ನು ಇಲ್ಲಿ ಲಭ್ಯವಾದ ಹಲವಾರು ಶಾಸನಗಳಲ್ಲಿ ಮಹಿಸ್ಪತಿ ನಗರ, ದಕ್ಷಿಣ ಕಾಶಿ, ಪೂವಲ್ಲಿ, ಪುಲಿಪುರ, ಪುಲಿಗ್ರಾಮ, ಚೂಡಾಮಣಿ ಪೂಲಿ, ಹೂಲಿ ಎಂದೆಲ್ಲ ಕರೆಯಲಾಗಿದೆ. ಎಲ್ಲಮ್ಮ ಚರಿತೆಯಲ್ಲಿ ಧರ್ಮವರ್ಧನ ಎಂಬ ರಾಜನು ಇಲ್ಲಿ ಆಳುತ್ತಿದ್ದನಂತೆ. ಜಮದಗ್ನಿಯು ರೇಣುಕಾದೇವಿಗೆ ಅಕ್ಕಿ ಕಾಳಿನ ತೂಕದ ಬಂಗಾರ ತರಲು ಈ ರಾಜನಲ್ಲಿಗೆ ಕಳಿಸುತ್ತಾನೆ ಎಂಬ ದೃಷ್ಟಾಂತವು, ಪರಶುರಾಮ ಮತ್ತು ಕಾರ್ತವೀರ್ಯಾರ್ಜುನರ ಹಲವು ಪ್ರಸಂಗಗಳು ಹೂಲಿ ಮತ್ತು ಸುತ್ತ ಮುತ್ತಲಿನ ಸ್ಥಳಗಳ ಕೆಲವು ಘಟನೆಗಳ ದೃಷ್ಟಾಂತಗಳಲ್ಲಿ ಉಲ್ಲೇಖಿತವಾಗುವ ಮೂಲಕ ಪುರಾಣ ಚರಿತ್ರೆಯಿಂದಲೂ ಪ್ರಸಿದ್ಧಿ ಹೊಂದಿದ ಗ್ರಾಮವಾಗಿ ಹೂಲಿ ಖ್ಯಾತಿಯಾಗಿತ್ತು,ಸರ್ವಧರ್ಮ ಸಮನ್ವಯತೆಯನ್ನು ಸಾಧಿಸಿದ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದ ವೀರಗಲ್ಲುಗಳು, ಮಹಾಸತಿಕಲ್ಲು, ಶಾಸನಗಳು, ವೈಷ್ಣವ, ಶೈವ, ಜೈನ ದೇವಾಲಯಗಳು ಮಠಗಳು ಇತಿಹಾಸದ ಮೇಲೆ ಬೆಳಕುಚೆಲ್ಲುವಂತ ದಾಖಲೆಗಳು ಇಲ್ಲಿ ಲಭ್ಯ.
ನೂರೊಂದು ದೇಗುಲಗಳಲ್ಲಿ ಬಹಳಷ್ಟು ದೇವಾಲಯಗಳು ಹಾಳಾಗಿದ್ದು ಅವುಗಳಿಗೆ ರಕ್ಷಣೆ ಇಲ್ಲದಾಗಿದ್ದು ಕೆಲವು ದೇವಾಲಯಗಳು ಮಾತ್ರ ತಮ್ಮ ಮೂಲ ವಾಸ್ತುಶಿಲ್ಪ ಕಲೆಯನ್ನು ಉಳಿಸಿಕೊಂಡಿವೆ. ಮದನೇಶ್ವರ ದೇವಾಲಯ, ಅಂಧಕೇಶ್ವರ ದೇವಾಲಯ, ತಾರಕೇಶ್ವರ. ಬನಶಂಕರಿ, ರಾಮೇಶ್ವರ, ನಾರಾಯಣ ದೇವಾಲಯ, ವೀರಭದ್ರ, ಕಲ್ಮೇಶ್ವರ, ಅಗಸ್ತೇಶ್ವರ, ಪಂಚಲಿಂಗೇಶ್ವರ ದೇವಾಲಯಗಳು ಹಾಗೂ ಪುರಾತನ ಬಾವಿಗಳು ಇಲ್ಲಿನ ಪ್ರಮುಖ ಆಕರ್ಷಣೆ.
ಇಲ್ಲಿನ ಅಂಧಕೇಶ್ವರ ದೇವಾಲಯದ ಅಂತರಾಳದಲ್ಲಿ ಮಕರತೋರಣವಿದ್ದು ಇದರಲ್ಲಿ ಶಿವನ ತಾಂಡವನೃತ್ಯ. ಚತುರ್ಮುಖ ಬ್ರಹ್ಮ. ವೈಕುಂಠ, ವಿಷ್ಣು ಇವರ ಉಬ್ಬು ಶಿಲ್ಪಗಳನ್ನು ಕಾಣಬಹುದು. ದ್ವಾರಬಂಧದ ಉದುಂಬರಕ್ಕೆ ಹೊಂದಿಕೊಂಡು ಚಂದ್ರಶಿಲಾ ರಚನೆ ಇರುವುದು.ಇಲ್ಲಿ ದ್ರಾವಿಡ ಮತ್ತು ಫಾಂಸನಾ ಶೈಲಿಯ ದೇವಾಲಯಗಳಿರುವುದು ವಿಶೇಷ. ದ್ರಾವಿಡ ಶೈಲಿಯ ದೇವಾಲಯಗಳ ಶಿಖರದಲ್ಲಿ ಮೇಲಕ್ಕೆ ಹೋದಂತೆ ಕ್ರಮೇಣ ಸಣ್ಣದಾಗುವ ಅಂತಸ್ತುಗಳಿದ್ದರೆ, ಈ ಅಂತಸ್ತು ಗರ್ಭಗೃಹದ ಪ್ರತಿರೂಪವಾಗಿರುವುದು.ಇದು ಪ್ರಧಾನವಾಗಿ ಆರು ಭಾಗಗಳನ್ನು ಹೊಂದಿದ್ದು ಅಧಿಷ್ಠಾ, ಭಿತ್ತಿ, ಪ್ರಸ್ತರ, ಗ್ರೀವ, ಶಿಖರ, ಸ್ತೂಪಿ ಹೀಗೆ ಆರು ಭಾಗಗಳನ್ನು ಹೊಂದಿ ಪ್ರತಿಯೊಂದು ಅಂತಸ್ತನ್ನು ವಿಭಾಗಿಸುವ ದುಂಡು ಕಪೋತಗಳು ಮತ್ತು ಮೇಲಂತಸ್ತುಗಳು ಸುತ್ತಲೂ ಇರುವ ಇಕ್ಕಟ್ಟಾದ ತೆರೆದ ಅಂಕಣಗಳನ್ನು ಹೊಂದಿವೆ.
ಗ್ರಾಮದ ಬಸ್ ನಿಲ್ದಾಣದಿಂದ ಇಳಿದು ಕಾಲ್ನಡಿಗೆಯಿಂದ ಬಂದರೆ ಸಿಗುವ ದೇಗುಲವೇ ಪಂಚಲಿಂಗೇಶ್ವರ ದೇವಾಲಯ. ಇದನ್ನು ಪುರಾತತ್ವ ಇಲಾಖೆಯವರು ಸಂರಕ್ಷಿಸಿದ್ದು ಇದೊಂದು ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು ಇನ್ನುಳಿದ ದೇವಾಲಯಗಳು ಕಾಯಕಲ್ಪಕ್ಕಾಗಿ ಕಾಯುತ್ತಿವೆ. ಐದು ವಿಶಿಷ್ಟ ಗೋಪುರಗಳನ್ನು ಒಳಗೊಂಡ ಈ ದೇವಾಲಯವನ್ನು ಕ್ರಿ.ಶ.1044 ರಲ್ಲಿ ಲಚ್ಚಿಯಬ್ಬರಸಿಯು ಕಟ್ಟಿಸಿದ್ದು ಪೂರ್ವಾಭಿಮುಖವಾಗಿ ಮೂರು, ದಕ್ಷಿಣ ಮತ್ತು ಉತ್ತರಕ್ಕೆ ಮುಖಮಾಡಿದ ಒಂದೊಂದು ಗರ್ಭಗೃಹಗಳನ್ನು ಈ ದೇವಾಲಯ ಒಳಗೊಂಡಿದೆ.
ಹೂಲಿ ಆರಂಭದಲ್ಲಿ ಜೈನ ಪರಂಪರೆಯನ್ನು ಹೊಂದಿದ್ದು ಕಾಲಾನಂತರ ಇಲ್ಲಿ ಆಳಿದ ರಾಜಮಹಾರಾಜರು ಶೈವ, ವೈಷ್ಣವರಾಗಿರುವ ಕಾರಣ ಇಲ್ಲಿ ಸರ್ವಧರ್ಮಗಳ ನೆಲೆಯನ್ನು ಕಂಡಿತು..ರಾಘವಾಂಕ ಕಾವ್ಯದ ಲೇಖಕ ಚಿಕ್ಕ ನಂಜೇಶ ಈ ಗ್ರಾಮಕ್ಕೆ ಸೇರಿದವನು. ಈತ ಹೂಲಿಯನ್ನು ಪೂವಲ್ಲಿ ಎಂದು ಕರೆದಿರುವನು..ಇನ್ನು ಮದನೇಶ್ವರ ದೇವಾಲಯದಲ್ಲಿ ದೊರೆತ ದಾಖಲೆಗಳ ಪ್ರಕಾರ ಹೂಲಿ ದೇವಗುರು ಪರಂಪರೆ ಹೊಂದಿದ್ದು ಈ ಪರಂಪರೆಯಲ್ಲಿ ವ್ಯಾಕರಣ-ತರ್ಕಗಳಲ್ಲಿ ಸಾಕಷ್ಟು ವಿದ್ವತ್ತು ಸಾಧಿಸಿದ ವಿದ್ವಾಂಸರು ಋಷಿಮುನಿಗಳು ಇದ್ದರೆಂದು ತಿಳಿಯಬಹುದು. ಇಲ್ಲಿ 19 ಕ್ಕೂ ಹೆಚ್ಚು ಶಿಲಾಶಾಸನಗಳು ಮತ್ತು ತಾಮ್ರಪಟಗಳು ದೊರೆತಿದ್ದು ಇತಿಹಾಸದ ಮೇಲೆ ಬೆಳಕು ಚೆಲ್ಲಿವೆ.
ಪಂಚಲಿಂಗೇಶ್ವರ ದೇವಾಲಯವನ್ನು ವೀಕ್ಷಿಸಿ ಕೆರೆಯ ದಡದತ್ತ ಸಾಗಿದರೆ ಅಲ್ಲಿ ಹಲವಾರು ದೇವಾಲಯಗಳು ಕೈಬೀಸಿ ಕರೆಯುತ್ತವೆ.ದ್ರಾವಿಡ ಶೈಲಿಯ ಅಗಸ್ತೇಶ್ವರ ದೇವಾಲಯ, ಭೀಮೇಶ್ವರ ದೇವಾಲಯ, ಕರಿಸಿದ್ದೇಶ್ವರ ದೇವಾಲಯ ಹೀಗೆ ದೇವಾಲಯಗಳ ಸಮುಚ್ಚಯವೇ ಇದೆ. ಶಿಥಿಲಾವಸ್ಥೆಯಲ್ಲಿರುವ ಈ ಎಲ್ಲ ದೇಗುಲಗಳನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಐಹೊಳೆ, ಪಟ್ಟದಕಲ್ಲಿನಲ್ಲಿ ದೇವಾಲಯಗಳನ್ನು ಸಂರಕ್ಷಿಸಿದ ಹಾಗೆ ಇವುಗಳನ್ನು ಸಂರಕ್ಷಿಸಿದ್ದರೆ ಇದು ಮತ್ತೊಂದು ದೇವಾಲಯಗಳ ತೊಟ್ಟಿಲು ಆಗಲು ಸಾಧ್ಯವಿತ್ತು ಅನ್ನಿಸದೇ ಇರದು. ಬೆಟ್ಟದಲ್ಲಿ ಕೋಟೆಯೊಂದು ಕಾಣುತ್ತದೆ ಇದು ಕೂಡ ಹಾಳಾಗಿದ್ದು ಇದು ಶಿವಾಜಿಯ ಕಾಲದ್ದು ಎಂದು ಹೇಳುವರು.
ಇನ್ನು ಮಠಮಾನ್ಯಗಳು ಕೂಡ ಇಂದಿಗೂ ಇಲ್ಲಿನ ಜನಮಾನಸದಲ್ಲಿ ಭಕ್ತಿಪರಂಪರೆ ಹುಟ್ಟುಹಾಕಿದ್ದು ಪುರಾತನ ಚರಿತ್ರೆಯುಳ್ಳ ಸಂಬಯ್ಯನ ಮಠ(ಹೂಲಿ ಅಜ್ಜನ ಮಠ), ಶೀಲವಂತರ(ರಂಭಾಪುರಿ) ಮಠ, ಹಿರೇಮಠ, ಪ್ರಮುಖವಾಗಿದ್ದು ನಿರ್ಮಲ ಮತ್ತು ಮಾಣಿಕ್ಯ ತೀರ್ಥ ಎಂಬ ಕೆರೆಗಳು, ವಾರಕರಿ ಪಂಥದವರು ಕಟ್ಟಿಸಿದ ಹರಿಮಂದಿರ ಹೂಲಿ ಮತ್ತೊಂದು ಆಕರ್ಷಣೆಯ ಭಕ್ತಿಯ ಸಂಕೇತಗಳು. ಹೂಲಿಯನ್ನು ನೋಡಬೇಕೆಂದರೆ ಇಡೀ ಒಂದು ದಿನ ಬೇಕು. ಕಾಲ್ನಡಿಗೆಯ ಮೂಲಕ ಊರು ಹಾಗೂ ಬೆಟ್ಟದಲ್ಲಿರುವ ದೇವಾಲಯಗಳು ಅಲ್ಲಲ್ಲಿ ಹರಿದಿರುವ ಕೆರೆಗಳು. ತಮ್ಮ ಇತಿಹಾಸ ಸಾರುತ್ತಿರುವ ಬಾವಿಗಳು. ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡ ಮೂಲಕ ಸವದತ್ತಿಗೆ ಸಾಕಷ್ಟು ಸಾರಿಗೆ ವ್ಯವಸ್ಥೆಯ ಅನುಕೂಲವಿದ್ದು ಉಳಿದುಕೊಳ್ಳಲು ಸವದತ್ತಿಯಲ್ಲಿ ಸಾಕಷ್ಟು ವಸತಿಗೃಹಗಳ ಅನುಕೂಲ ಕೂಡ ಇರುವುದು. ಸವದತ್ತಿಯಿಂದ ಹತ್ತಿರದಲ್ಲಿರುವ ಹೂಲಿಗೆ ಒಂದೆರಡು ದಿನದ ಮಟ್ಟಿಗೆ ಭೇಟಿ ನೀಡಿದರೆ ಇಲ್ಲಿನ ಶಿಲ್ಪಕಲೆಯ ವೈಭವವನ್ನು ಕಣ್ತುಂಬಿಕೊಳ್ಳಬಹುದು.
source: ಹೊಸದಿಗಂತ 

No comments:

Post a Comment