Saturday, 24 February 2024

ಶಾಸನ ಪದ್ಯಗಳಲ್ಲಿ ಹೂಲಿ – ಭಾಗ ೨

('ಆಕೃತಿ ಕನ್ನಡ' ಜಾಲ ಪತ್ರಿಕೆಯಲ್ಲಿ “ಹರನ ಕೊರಳ ಹೂಮಾಲೆ- ಹೂಲಿ" ಸರಣಿಯಲ್ಲಿ ಪ್ರಕಟವಾದ ಬರಹ)

ಪ್ರಾಚೀನ ಕಾಲದಲ್ಲಿ ವಿದ್ಯಾಕೇಂದ್ರ, ಆಡಳಿತ ಕೇಂದ್ರ, ಧಾರ್ಮಿಕ ಕೇಂದ್ರವಾಗಿದ್ದ ಹೂಲಿಯನ್ನು ಶಾಸನ ಪದ್ಯಗಳು ವರ್ಣಿಸಿರುವುದನ್ನು ವಿವರಿಸುವ ಈ ಬರಹದ ಮೊದಲ ಭಾಗ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಆ ಬರಹದಲ್ಲಿ ಹೂಲಿಯ ಮೂರು ಶಾಸನಗಳ ಪದ್ಯಗಳನ್ನಷ್ಟೇ ಚರ್ಚಿಸಿದ್ದೆವು. ಈ ಬರಹದಲ್ಲಿ ಮತ್ತೆ ನಾಲ್ಕು ಶಾಸನಗಳ ಪದ್ಯಗಳನ್ನು ಓದಿ,ಅರ್ಥೈಸಿ, ಆನಂದಿಸೋಣ.

ಈ ಭಾಗದಲ್ಲಿ ಕೂಡ ಪದ್ಯಗಳ ಪಠ್ಯ ಓರೆ ಅಕ್ಷರಗಳಲ್ಲಿದೆ, ಉಳಿದ ಬರಹ ನೇರ ಅಕ್ಷರಗಳಲ್ಲಿದೆ.  ಬಹುತೇಕ ಕಠಿಣಪದಗಳ ಅರ್ಥಗಳನ್ನು ಭಾವಾನುವಾದದಲ್ಲಿಯೇ ವಿವರಿಸಲಾಗಿದೆ – ಉಳಿದ ಪದಗಳ ಅರ್ಥವನ್ನು ಬರಹದ ಕೊನೆಗೆ ಪಟ್ಟಿಯಲ್ಲಿ ಕೊಡಲಾಗಿದೆ.

 

ಕ್ರಿ.ಶ. ೧೧೦೪ರ ಶಾಸನ (ಇಐ ೧೮ -೨೨/ಇ)

ಕಲ್ಯಾಣ ಚಾಲುಕ್ಯರ ದೊರೆಯಾದ ತ್ರಿಭುವನಮಲ್ಲನ ಪ್ರಧಾನನಾಗಿದ್ದ ಅಂತರಸನ ಆಜ್ಞೆಯಂತೆ ಸಿಂಗರಸನು ಅಂಧಾಸುರದೇವರಿಗೆ ದತ್ತಿಬಿಟ್ಟ ವಿಷಯವಿರುವ ಈ ಶಾಸನಕಲ್ಲು ಮೊದಲು ಅಂಧಕೇಶ್ವರ ಗುಡಿಯ ಹತ್ತಿರವಿದ್ದುದನ್ನು ಈಗ ಪಂಚಲಿಂಗೇಶ್ವರ ಗುಡಿಯಲ್ಲಿನ ಸಂಗ್ರಹಾಲಯದಲ್ಲಿ ಇಡಲಾಗಿದೆ.  ಈ ಶಾಸನದಲ್ಲಿ ಕಾಳಾಮುಖ ಸಂಪ್ರದಾಯದ ಗುರುಗಳನ್ನು ಹೊಗಳಿ, ಹೂಲಿಯನ್ನೂ, ಹೂಲಿಯ ಮಹಾಜನರನ್ನೂ ಕಾವ್ಯಗಳಲ್ಲಿ ಹೊಗಳಲಾಗಿದೆ.



 

ಪದ್ಯ೧: 

ಚಂಪಕಮಾಲಾ ವೃತ್ತದಲ್ಲಿರುವ ಈ ಪದ್ಯ ಹೂಲಿಯನ್ನು ವರ್ಣಿಸುತ್ತದೆ:


ವನಧಿ ಪರೀತ ಭೂತಳ ವಿಳಾಸವತೀ ಮುಖದಂತೆ ತೋರ್ಪ ಚೆ

ಲ್ವಿನ ಕಣಿ ಬೆಳ್ವಲಕ್ಕೆ ತಿಲಕಾಕೃತಿಯಿಂದೆಸೆದಿರ್ಪ ಪೂಲಿಯೇ

ನನಿಮಿಷರಾಜನಿರ್ಪ ಪುರವೋ ಫಣಿರಾಜನ ರಾಜಧಾನಿಯೋ

ಮನುಜನಿವಾಸಮಲ್ಲದೆನಿಸಲ್ ನೆರೆಗುಂ ಪೆರೆತೊಂದು ಶೋಭೆಯಿಂ

 

ʼವನಧಿʼ ಎಂದರೆ ಸಾಗರ, ʼವಿಳಾಸವತಿʼ ಎಂದರೆ ಸುಂದರಿ, ʼಅನಿಮಿಷʼ ಎಂದರೆ ಕಾಲಾತೀತರಾದವರು, ದೇವತೆಗಳು ಎಂದರ್ಥ. ʼಅನಿಮಿಷರಾಜʼ ಎಂದರೆ ದೇವತೆಗಳ ರಾಜ – ಇಂದ್ರ.

 

ಪದ್ಯದ ಅರ್ಥ : “ಸಾಗರವನ್ನು ಉಟ್ಟ ಸುಂದರಿ ಭೂಮಿಗೆ ಮೊಗದಂತೆ ತೋರುವ ಚಲುವಿನ ಕಣಿ ಬೆಳ್ವಲ. ಆ ಮೊಗದಲ್ಲಿ ತಿಲಕದಂತೆ ಹೊಳೆಯುವುದೇ ಹೂಲಿ. ಈ ಹೂಲಿಗೆ ʼಇದು ದೇವತೆಗಳ ರಾಜ ಇಂದ್ರ ವಾಸಿಸುವ ಇಂದ್ರಪುರಿಯೋ ಅಥವಾ ನಾಗರಾಜನ ರಾಜಧಾನಿಯೋ? ಮನುಷ್ಯಮಾತ್ರರು ವಾಸಿಸುವ ಸ್ಥಳ ಇದಲ್ಲವೇ ಅಲ್ಲʼ ಎನಿಸುವಷ್ಟು ಶೋಭೆಯಿದೆ..

 

ಪದ್ಯ೨:

ಕಂದ ಛಂದದಲ್ಲಿರುವ ಈ ಪದ್ಯ ಹೂಲಿಯನ್ನು ವೇದಗಳ ತವರೂರು ಎಂದು ವರ್ಣಿಸಿದೆ:

ಅದು ವೇದಂಗಳ ತಾಯ್ವನೆ 

ಯದು ನಾನಾ ತರ್ಕದಿರ್ಕೆದಾಣಂ ಕೇಳಂ

ತದು ಶಾಸ್ತ್ರಂಗಳ ಕಣಿಯೆನಿ

ಸಿದುದವನೀಚಕ್ರದೊಳಗೆ ಪೂಲಿಗ್ರಾಮಂ

ʼಅವನೀʼ ಎಂದರೆ ಭೂಮಿ.  ʼಅವನೀಚಕ್ರʼ ಎಂದರೆ ಭೂಮಂಡಲ.

ಪದ್ಯದ ಅರ್ಥ : “ಈ ಪೂಲಿಗ್ರಾಮವು ವೇದಗಳ  ತವರುಮನೆ, ಇದು ವಿವಿಧ ತರ್ಕ ವಿಭಾಗಗಳ ತಾಣ, ಕೇಳಿಲ್ಲಿ, ಇದು ಶಾಸ್ತ್ರಂಗಳ ಗಣಿಯಂದು ಭೂಮಂಡಲದಲ್ಲಿ ಹೆಸರುವಾಸಿಯಾಗಿದೆ.”

 

ಪದ್ಯ೩:

ಮುಂದಿನ ಪದ್ಯವೂ ಕಂದ ಛಂದದಲ್ಲಿದೆ. ಅದು ಹೂಲಿಯ ಪರಿಸರವನ್ನು ವರ್ಣಿಸಿದೆ:

ಆರಮೆ ಣ್ತೆರೆಗಿದ ಸಹ

ಕಾರಮೆ ಭೋರೆಂದು ಮೊರೆಯುತಿರ್ಪಳನೀ ಝಂ

ಕಾರಮೆ ಸುಗಂಧ ಕುಸುಮಾ

ಸಾರಮೆ ಪೊರವೋಲೊಳೆಂದೊಡೇವಣ್ಣಿಪುದೋ

ʼಆರಮೆʼ ಎಂದರೆ ಉದ್ಯಾನ, ʼಪಣ್ತೆರೆಗಿದ ಸಹಕಾರʼ ಎಂದರೆ ಹಣ್ಣಾದ ಮಾವಿನ ಹಣ್ಣು. ʼಅಳಿನಿʼ ಎಂದರೆ ಜೇನ್ನೊಣ.

ಪದ್ಯದ ಅರ್ಥ : “ಉದ್ಯಾನಗಳೋ, ಮರಗಳಲ್ಲಿ ತುಂಬಿ ತೂಗುತ್ತಿರುವ ಮಾವಿನ ಹಣ್ಣುಗಳೋ, ಭೋರೆಂದು ಮೊರೆಯುತಿರುವ ಜೇನ್ನೊಣಗಳ ಝೇಂಕಾರವೋ, ಈ ಊರನ್ನು ಸುತ್ತುವರೆದಿರವ ಹೂವುಗಳ ಸುಗಂಧಯುಕ್ತ ಪರಿಮಳವೋ, ಹೇಗೆ ಬಣ್ಣಿಸುವುದು ?”

ಪದ್ಯ೪:

ಈ ಪದ್ಯ ಚಂಪಕಮಾಲಾ ವೃತ್ತದಲ್ಲಿದೆ. ಇದರಲ್ಲಿ ಹೂಲಿಯ ಗುಡಿಯ ಗೋಪುರ-ಕಳಶಗಳನ್ನು ವರ್ಣಿಸಿದೆ:

ಸುರನಿಲಯಂಗಳೀಶನ ದಿನೇಶನ ಪಾದ ಯುಗಕ್ಕೆ ಭಕ್ತರ

ಪ್ಪರನವರಿರ್ಪ ಶಾಶ್ವತಪದಕ್ಕಡರ್ದೇರೆಸಲೆಂದು ಸಾರಮಾ

ಗಿರೆ ಬಿದಿ ಕಟ್ಟಿದೊಂದು ಪಥಮೆಂಬವೊಲಂಬರಮಂ ತರುಂಬಿ ಭಾ

ಸುರತರ ಶಾತಕುಂಭ ಕಳಶಂಗಳಿನೊಪ್ಪುಗುಮೆಂತು ನೋಳ್ಪೊಡಂ

ʼಸುರನಿಲಯʼ ಎಂದರೆ ದೇವಸ್ಥಾನ,  ʼಪಾದಯುಗʼ ಎಂದರೆ ಜೋಡಿಪಾದಗಳು, ʼಸಾರʼ ಎಂದರೆ ಇಲ್ಲಿ ಮೆಟ್ಟಿಲು, ʼಬಿದಿʼ ಎಂದರೆ ಬ್ರಹ್ಮ, ಸೃಷ್ಟಿಕರ್ತ. ʼಶಾತಕುಂಭʼ ಎಂದರೆ ಬಂಗಾರ.


ಪದ್ಯದ ಅರ್ಥ : “ಈಶ-ದಿನೇಶರ ಪಾದಗಳಿಂದ ಭಕ್ತರನು ಶಾಶ್ವತಪದಕ್ಕೆ ಏರಿಸೆಲೆಂದು ಮೆಟ್ಟಿಲುಗಳಾಗಲಿ ಎಂದು ಸೃಷ್ಟಿಕರ್ತ ಕಟ್ಟಿದ ಪಥವೋ ಎನಿಸುವಂತೆ ಮುಗಿಲು ಮರೆಮಾಡುವ ದೇವಾಲಯಗಳ ಪ್ರಕಾಶಮಾನವಾದ ಬಂಗಾರದ ಕಳಶಗಳು ಕಾಣಿಸುತ್ತವೆ.” 

 

ಪದ್ಯ೫:

ಕಂದ ಛಂದಸ್ಸಿನಲ್ಲಿರುವ ಈ ಪದ್ಯ ಹೂಲಿಯ ವಾತಾವರಣವನ್ನು ವರ್ಣಿಸುತ್ತದೆ:

ಅಖಿಳ ಮಹೀದೇವ‌ರ್ ಶತ

ಮಖನಂ ತಣಿಪಲ್ಕೆ ಕೂಡೆ ಮಾಡುತ್ತಿರೆ ಕಾ

ರ್ಮುದವೊಲೆಸೆಗುಂ ನಾನಾ

ಮಖಧೂಮಸ್ತೋಮದಿಂದಮೆಂದುಂ ವ್ಯೋಮಂ ||

ಮಖ ಎಂದರೆ ಯಜ್ಞ. ʼಶತಮಖʼ ಎಂದರೆ ನೂರು ಯಜ್ಞಗಳನ್ನು ಮಾಡಿದವನು- ಇಂದ್ರ; ‘ಕಾರ್ಮುಕ’ ಎಂದರೆ ಮಳೆಗಾಲದ ಆರಂಭ, ʼಮಹೀʼ ಎಂದರೆ ಭೂಮಿ, ʼಮಹೀದೇವ‌ರುʼ ಎಂದರೆ ಭೂಸುರರು,ಬ್ರಾಹ್ಮಣರು. 

ಈ ಪದ್ಯದ ಅರ್ಥ : “ಇಂದ್ರ ಸಂತೃಪ್ತಿಗಾಗಿ ಬ್ರಾಹ್ಮಣರೆಲ್ಲರೂ ಒಟ್ಟಾಗಿ ಮಾಡುವ ವಿವಿಧ ಯಜ್ಞಗಳ ಹೊಗೆಯಿಂದಾಗಿ ಮುಗಿಲು ಮಳೆಗಾಲದ ಆರಂಭದಲ್ಲಿ ಮೂಡುವ ಕಾಮನಬಿಲ್ಲಿನಂತೆ ಬೆಳಗುತ್ತಿರುತ್ತದೆ.”

 

ಪದ್ಯ೬:

ಮತ್ತೇಭವಿಕ್ರೀಡಿತ  ವೃತ್ತದಲ್ಲಿರುವ ಈ ಪದ್ಯ ಹೂಲಿಯ ಸಾವಿರ ಮಹಾಜನರನ್ನು ವರ್ಣಿಸುತ್ತದೆ:

 ವಿಪುಳಾಚಾರರಗಣ್ಯಪುಣ್ಯನಿಳಯ‌ರ್ ಲೋಕೈಕಪೂಜ್ಯರ್ ಕಳಾ 

ನಿಪುಣ‌ರ್ ಶಾರದ ನೀರದೋಪಮಯಶ‌ರ್ ಶಿಷ್ಟೇಷ್ಟವರ್ಗಾಮರಾಂ

ಘ್ರಿಪರುದ್ವೃತ್ತವಿರೋಧಿಸಾಧನಹರ‌ರ್ ಶ್ರೀ ಕೇಶವಾದಿತ್ಯ ದೇ 

ವಪದಾಂಭೋರುಹ ಭೃಂಗರೆಂದು ಪೊಗಳ್ದುಂ ಸಾಸಿರ್ವರಂ ಭೂತಳಂ

 

ʼಶಾರದʼ ಎಂದರೆ ಇಲ್ಲಿ ಶರತ ಋತುವಿನ ಎಂದು ಅರ್ಥ, ʼನೀರದʼ ಎಂದರೆ ಮೋಡ.ʼಶಾರದ ನೀರದʼ ಎಂದರೆ ಶರತ ಋತುವಿನ ಮಳೆ ಹೊತ್ತು ತರುವ ಮೋಡಗಳು ಎಂದು ಅರ್ಥ. ʼಅಂಘ್ರಿʼ ಎಂದರೆ ಪಾದ, ʼಅಂಘ್ರಿಪʼ ಎಂದರೆ ಪಾದದಿಂದ ನೀರು ಕುಡಿಯುವಂತಹದು – ಮರ (ʼಪಾದಪʼ ಎಂದರೂ ಮರ), ʼಅಮರಾಂಘ್ರಿಪʼ ಎಂದರೆ ದೇವಲೋಕದ ಮರ, ಕಲ್ಪವೃಕ್ಷ.

 

ಪದ್ಯದ ಅರ್ಥ : “ಹೂಲಿಯ ಸಾವಿರ ಮಹಾಜನಗಳು ವಿಪುಲ ಸನ್ನಡತೆಯ ವ್ಯಕ್ತಿಗಳು,  ಅಗಣಿತ ಪುಣ್ಯ ಹೊಂದಿರುವವರು, ಲೋಕಪೂಜ್ಯರು, ಕಲೆಗಳಲ್ಲಿ ನಿಪುಣರು, ಶರತ ಋತುವಿನ ಮಳೆತರುವ ಮೋಡಗಳಂತಹ ಖ್ಯಾತಿಯನ್ನು ಹೊಂದಿರುವವರು, ಶಿಷ್ಟರಿಗೆ ಕಲ್ಪವೃಕ್ಷಗಳಂತವರು, ಸೊಕ್ಕಿದ ವಿರೋಧಿಗಳ ಸಾಧನಹರರು, ಶ್ರೀ ಕೇಶವಾದಿತ್ಯ ಪಾದಕಮಲಕ್ಕೆ ಭೃಂಗನಂತವರು ಎಂದು ಲೋಕವೆಲ್ಲ ಹೊಗುಳುತ್ತದೆ.”

 

ಕ್ರಿ.ಶ. ೧೧೦೭ರ ಶಾಸನ ( ಇಐ ೧೮ -೨೨/ಎಫ್)

‌ಕೆರೆ ಸಿದ್ದೇಶ್ವರ ಗುಡಿಯಲ್ಲಿರುವ ಕಲ್ಯಾಣದ ಚಾಲುಕ್ಯರ ದೊರೆಯಾದ ತ್ರಿಭುವನಮಲ್ಲ(ವಿಕ್ರಮಾದಿತ್ಯ-೪)ನ ಆಳ್ವಿಕೆಯಲ್ಲಿ ಹೂಲಿಯ ಭಾಗವಾದ ಕಳಶವಳ್ಳಿಗೇರಿಯ ನೂರು ಮಹಾಜನರು ಕೇದಾರೇಶ್ವರ ದೇವರಿಗೆ ದತ್ತಿ ಬಿಟ್ಟದ್ದನ್ನು ದಾಖಲಿಸುತ್ತದೆ. ಈ ಶಾಸನದಲ್ಲಿ ಹೂಲಿಯ ಸಾವಿರ ಮಹಾಜನರನ್ನು ಮತ್ತು ಕಳಶವಳ್ಳಿಗೇರಿಯ ನೂರು ಮಹಾಜನರನ್ನು ವರ್ಣಿಸುವ ಪದ್ಯಗಳಿವೆ.

 



ಪದ್ಯ೧:

ಮತ್ತೇಭವಿಕ್ರೀಡಿತ  ವೃತ್ತದಲ್ಲಿರುವ ಈ ಪದ್ಯ ಹೂಲಿಯ ಸಾವಿರ ಮಹಾಜನರನ್ನು ವರ್ಣಿಸುತ್ತದೆ:

ಭುವನ ಪ್ರಸ್ತುತರೇಕ ವಾಕ್ಯರಚಳ‌ರ್ ಶ್ರೀ ಕೇಶವಾದಿತ್ಯ ದೇ

ವವರಪ್ರಾಪ್ತ ಸಮಸ್ತ ಸಂಪದರಶೇಷಾಶಾಸಮಾಕೀರ್ಣ

ರ್ಣವಿಲಾಸ‌ರ್ ಚತುರರ್ ಚತುಸ್ಸಮಯಸಂಸೇವ್ಯ‌ರ್ ಚತುರ್ವೇದಶಾ

ಸ್ತ್ರವಿಚಾರಕ್ಷಮರೆಂದೊಡೇವೊಗಳ್ವುದೋ ಸಾಸಿರ್ವರ ಖ್ಯಾತಿಯಂ !!

 

ಪ್ರಸ್ತುತ’ ಎನ್ನುವುದು ʼಹೊಗಳಲ್ಪಟ್ಟʼ ಎಂಬ ಅರ್ಥದ ಗುಣವಾಚಕ. ʼಏಕ ವಾಕ್ಯರ್‌ ಅಚಳರ್ʼ ಎಂದರೆ ಒಂದೇ ಮಾತಿನವರು, ಮಾತು ಬದಲಿಸದ ಅಚಲರು ಎಂದು ಅರ್ಥ.

ʼಅಶೇಷʼ ಎಂದರೆ ʼಎಲ್ಲವನ್ನು ಒಳಗೊಂಡʼ, ʼಸಮಸ್ತʼ ಎಂದು ಅರ್ಥ. ʼಆಶಾʼ ಎಂದರೆ ದಿಕ್ಕು. ʼಸಮಾಕೀರ್ಣʼ ಎಂದರೆ ತುಂಬಿದುದು. ʼವರ್ಣವಿಳಾಸʼ ಎಂದರೆ ಶಬ್ದಸೌಂದರ್ಯ.

ʼಚತುಸ್ಸಮಯʼ ಎಂದರೆ ಬೌದ್ಧ, ಜೈನ, ವೈಷ್ಣವ ಹಾಗೂ ಶೈವ  ಎಂಬ ನಾಲ್ಕು ಮತಗಳು. ʼಸಂಸೇವ್ಯ‌ʼರು ಎಂದರೆ ಪೂಜ್ಯರು.

 

ಪದ್ಯದ ಒಟ್ಟಾರೆ ಅರ್ಥವನ್ನು ಹೀಗೆ ಹೇಳಬಹುದು : “ಹೂಲಿಯ ಸಾವಿರ ಮಹಾಜನರು ಪ್ರಪಂಚದಾದ್ಯಂತ ಹೊಗಳಲ್ಪಟ್ಟವರು, ಮಾತು ಬದಲಿಸದ ಅಚಲರು, ಶ್ರೀ ಕೇಶವಾದಿತ್ಯ ದೇವರ ವರದಿಂದ ಸಕಲ ಸೌಭಾಗ್ಯವನ್ನು ಪಡೆದವರು, ಎಲ್ಲ ದಿಕ್ಕುಗಳನ್ನು ತಮ್ಮ ಶಬ್ದಸೌಂದರ್ಯದಿಂದ ತುಂಬ ಬಲ್ಲವರು, ಚತುರರು, ಚತುರ್ವೇದ-ಶಾಸ್ತ್ರಗಳಲ್ಲಿ ಗಟ್ಟಿಗರು,  ಅವರ ಖ್ಯಾತಿಯನ್ನು ಹೇಗೆ ಹೊಗಳುವುದು?”

 

ಪದ್ಯ೨:

ಹೂಲಿಯ ಓಣಿಯಾದ ಕಳಶವಳ್ಳಿಗೇರಿಯ ನೂರು ಮಹಾಜನರನ್ನು ಈ ಕಂದ ಪದ್ಯ ವರ್ಣಿಸುತ್ತದೆ.

ವಿದಿತ ಶ್ರೀ ಪೂಲೀಪುರ

ವದನಾಲೋಕನ ಸುದರ್ಪಣ‌ರ್ ತಾವೆನಿಪ‌ರ್

ಸದಮಳ ಚರಿತ‌ರ್ ಗುಣಗಣ

ಸದನರೆನಲ್‌ ಕಳಶವಳ್ಳಿಗೇರಿಯ ನೂರ್ವ‌ರ್

ʼವಿದಿತʼ ಎಂದರೆ ಪ್ರಸಿದ್ಧವಾದ ಎಂದಂತೆ. ʼವದನʼ ಎಂದರೆ ಮುಖ, ʼವದನಾಲೋಕನʼ ಎಂದರೆ ಮುಖ ನೋಡಿಕೊಳ್ಳಲು ಎಂದು ಅರ್ಥ.

ಪದ್ಯದ ಅರ್ಥ : “ಶ್ರೀ ಪೂಲೀಪುರಕ್ಕೆ ಮುಖನೋಡುವ ಚಲುವಗನ್ನಡಿಯಂದೆನಿವವ  ಕಳಶವಳ್ಳಿಗೇರಿಯ ನೂರು ಮಹಾಜನರು ಕಳಂಕರಹಿತ ಚಾರಿತ್ರ ಹೊಂದಿರುವವರು, ಗುಣಗಣಗಳಿಗೆ ನೆಲೆಯಾದವರು”.

 

ಕ್ರಿ.ಶ.೧೧೬೨ರ ಶಾಸನ ( ಇಐ ೧೮ -೨೨/ಎಲ್)

ಮೂಲತಃ ವಿರಕ್ತಮಠದ ಹತ್ತಿರ ಇದ್ದ ಈ ಶಾಸನಕಲ್ಲನ್ನು ಈಗ ಪಂಚಲಿಂಗಪ್ಪನ ಗುಡಿಯ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಇದರಲ್ಲಿ ಕಳಚುರ್ಯ ರಾಜನಾದ ತ್ರಿಭುವನಮಲ್ಲದೇವನ (ಬಿಜ್ಜಳನ) ಆಳಿಕೆಯಲ್ಲಿ ಪೆರ್ಗಡೆ ದಾಸಿರಾಜನು ನಾಗರಖಂಡಿಯ ಕೇಶವ ದೇವಸ್ಥಾ ನವನ್ನು ಜೀರ್ಣೋದ್ಧಾರ ಮಾಡಿ ಭೂಮಿಯನ್ನು ಕೊಂಡು ದತ್ತಿ ಬಿಟ್ಟಿದ್ದನ್ನು ದಾಖಲಿಸಿದೆ.

ಶಾಸನದಲ್ಲಿ ಭಾರದ್ವಾಜ ಗೋತ್ರದ ದಾಸಿರಾಜನ ವಂಶಾವಳಿಯನ್ನು ಹೇಳುವುದಕ್ಕಿಂತ ಮೊದಲು, ಹೂಲಿಯನ್ನು, ಹೂಲಿಯ ಸಾವಿರ ಮಹಾಜನರನ್ನು, ಹೂಲಿಯ ಒಂದು ಭಾಗವಾಗಿದ್ದ ಶಿವೆಯಗೇರಿಯ ನೂರು ಮಹಾಜನರನ್ನು ಪದ್ಯಗಳಲ್ಲಿ ವರ್ಣಿಸುತ್ತದೆ.



ಪದ್ಯ ೧:

ಈ ಪದ್ಯ ಹೂಲಿಯನ್ನು ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿ ವರ್ಣಿಸುತ್ತದೆ.

ರಾಮಾರಾಮ ವಿಕೀರ್ಣದಿಂ ನಿಖಿಲ ದೇವಾನೀಕದಿಂ ಋಗ್ಯಜು

ಸ್ಸಾಮಾಥರ್ವಣ ವೇದ ಶಾಸ್ತ್ರವಿದಿತ ವ್ಯಾಪಾರ ಚಾತುರ್ಯದಿಂ

ಶ್ರೀಮತ್ಕೊಟ್ಟಜವಾವಿಯಿಂ ಕೆರೆಗಳಿಂ ಕಾಂತಾ ಜನಾನೀಕದಿಂ

ದೇಮಾತೋ ಸಲೆ ಪೂಲಿ ಲೀಲೆವಡೆಗುಂ ಪೂದೋಂಟದೊಂದೋಳಿಯಿಂ ||

 

ʼರಾಮʼ ಎಂದರೆ ಮನೋಹರವಾದು̧ದು ಎಂದೂ ಕೂಡ ಅರ್ಥ. ‘ಆರಾಮ’ ಎಂದರೆ ಸುಖ. ʼವಿಕೀರ್ಣʼ ಎಂದರೆ ತುಂಬಿದ ಎಂದರ್ಥ. ‘ನಿಖಿಲ’ ಎಂದರೆ ಸಮಸ್ತ ಎಂದರ್ಥ. ʼಅನೀಕʼ ಎಂದರೆ ಗುಂಪು. ‘ಏಮಾತೂʼ ಎಂದರೆ ʼಏನು ಮಾತುʼ ಎಂದರ್ಥ.

 

‘ಕೊಟ್ಟಜ’ ಎಂದರೆ ಕಪ್ಪ-ಕಾಣಿಕೆ. ʼವಾವಿʼ ಎಂದರೆ ಬಾವಿ. ʼಶ್ರೀಮತ್‌ ಕೊಟ್ಟಜ ವಾವಿʼ ಎಂದರೆ ಕಪ್ಪದ ರೂಪವಾಗಿ ಯಾರಾದರು ತೋಡಿಸಿ ಕೊಟ್ಟ ಬಾವಿ ಎಂದು ಊಹಿಸಬಹುದು.

 

ಪದ್ಯದ ಅರ್ಥವನ್ನು ಹೀಗೆ ಹೇಳಬಹುದು – “ಮನೋಹರವಾದ ಸುಖದಿಂದ ತುಂಬಿ, ದೇವಗಣಗಳಿಂದ, ಚತುರ್ವೇದ ಪರಿಣಿತರಿಂದ, ಬಾವಿ-ಕೆರೆ, ಸುಂದರಿಯರ ಮಾತಂತೂ ಹೇಳೋದೇ ಬೇಡ, ಹೂದೋಟಗಳ ಸಾಲುಗಳಿಂದ ಹೂಲಿಯ ಲೀಲೆ ತೋರಿಸುತ್ತಿತ್ತು.”

 

ಪದ್ಯ ೨:

ಮತ್ತೇಭವಿಕ್ರೀಡಿತ ವೃತ್ತದಲ್ಲಿರುವ ಈ ಪದ್ಯ ಹೂಲಿಯ ಸಾವಿರ ಮಹಾಜನರನ್ನು ವರ್ಣಿಸುತ್ತದೆ:

ಇನನಂ ತೇಜದೊಳಿಂದ್ರನಂ ವಿಭವದೊಳ್ ಚಾಣಕ್ಯನಂ ನೀತಿಯೊಳ್

ಮನುವಂ ಚಾರುಚರಿತ್ರದೊಳ್ ಜಳಧಿಯಂ ಗಾಂಭೀರ್ಯದೊಳ್ ಧೈರ್ಯದೊಳ್

ಕನಕಾದ್ರೀಂದ್ರಮನೆಯ್ದೆ ಪೋಲ್ಪರೆನಿಪೀ ಸಾಸಿರ್ವರಂ ಖ್ಯಾತಿಯೊಳ್

ಮನುಜರ್ಕಳ್ ಪಡಿಪಾಟಿ ಪಾಸಟಿ ಸಮಂ ಬರ್ಪನ್ನರಾರ್ ಧಾತ್ರಿಯೊಳ್‌ ||

ʼಇನʼ ಎಂದರೆ ಸೂರ್ಯ.  ʼವಿಭವʼ ಎಂದರೆ ಘನತೆ, ಚಾರುಚರಿತ್ರ ಎಂದರೆ ಸಚ್ಚಾರಿತ್ರ, ಒಳ್ಳೆಯ ನಡತೆ. ʼಧೈರ್ಯʼ ಎಂದರೆ ಇಲ್ಲಿ  ದೃಢತೆ, ನಿಶ್ಚಲತೆ

ಪದ್ಯದ ಅರ್ಥ : “ತೇಜಸ್ಸಿನಲ್ಲಿ ಸೂರ್ಯನನ್ನು, ಘನತೆಯಲ್ಲಿ ಇಂದ್ರನನ್ನು, ನೀತಿಯಲ್ಲಿ ಚಾಣಕ್ಯನನ್ನು, ಸಚ್ಚಾರಿತ್ರದಲ್ಲಿ ಮನುವನ್ನು, ಗಾಂಭೀರ್ಯದೊಳಗೆ ಸಾಗರವನ್ನು, ದೃಢತೆಯೊಳಗೆ ಕನಕಾದ್ರಿಯನ್ನು ಹೋಲುವ ಹೂಲಿಯ ಸಾವಿರ ಮಹಾಜನರ ಖ್ಯಾತಿಗೆ ಮನುಷ್ಯರಲ್ಲಿ ಸರಿಸಾಟಿಯಾಗಿ ಬರುವಂತವರು ಭೂಮಿಯಲ್ಲಿ ಯಾರಿದ್ದಾರೆ ?”

 

ಪದ್ಯ ೩:

ಹೂಲಿಯ ಓಣಿ ಶಿವೆಯಗೇರಿಯ ನೂರು ಮಹಾಜನರನ್ನು ವರ್ಣಿಸುವ ಈ ಪದ್ಯದ ಛಂದಸ್ಸು- ಕಂದಪದ್ಯ.

ಒರ್ವೊವ್ರರ್ ಪರಿಭಾವಿಸೆ

ಸರ್ವಜ್ಞ‌ರ್ ನೆಗಳ್ದ ವೇದಶಾಸ್ತ್ರಂಗಳೊಳೆಂ

ದುರ್ವೀತಳಮಭಿವರ್ಣಿಸೆ

ನೂರ್ವರ್ ಶ್ರೀ ಶಿವೆಯಗೇರಿಯೊಳ್ ಕರಮೆಸೆದ‌

ʼನೆಗಳ್ದʼ ಎಂದರೆ ಪ್ರಸಿದ್ಧವಾದ, ʼಉರ್ವಿತಳʼ ಎಂದರೆ ಭೂತಳ, ಜಗತ್ತು.

ಪದ್ಯದ ಅರ್ಥ: “ʼಒಬ್ಬಬ್ಬರನ್ನೂ ವೇದಶಾಸ್ತ್ರಗಳಲ್ಲಿ ಸರ್ವಜ್ಞರು ಎಂದು ಭಾವಿಸಬಹುದುʼ ಎಂದು ಜಗತ್ತೇ ಹೊಗಳುತ್ತಿದ್ದ ನೂರು ಮಹಾಜನರು ಶಿವೆಯಗೇರಿಯಲ್ಲಿ ಶೋಭಿಸುತ್ತಿದ್ದರು.”

 

ಕ್ರಿ.ಶ.೧೧೬೨ರ ಶಾಸನ ( ಇಐ ೧೮ -೨೨/ಎಮ್)

ಅಗಸ್ತೇಶ್ವರ ಗುಡಿಯ ಗೋಡೆಯಲ್ಲಿ ಅಳವಡಿಸಿರುವ ಈ ಶಾಸನ ಹಿಂದಿನ ಶಾಸನಕ್ಕೆ ಸಮಕಾಲೀನವಾದದ್ದು. ಇದರಲ್ಲಿಯೂ ಕೂಡ ಕಳಚುರ್ಯ ರಾಜನಾದ ತ್ರಿಭುವನಮಲ್ಲದೇವನ (ಬಿಜ್ಜಳನ) ಆಳಿಕೆಯಲ್ಲಿ ಪೆರ್ಗಡೆ ದಾಸಿರಾಜ ಅಗಸ್ತೇಶ್ವರ ಗುಡಿ ಮತ್ತು ಅದರ ಪಕ್ಕದ ನಾಗರಭಾವಿಯ ನಿರ್ವಹಣೆಗಾಗಿ ದತ್ತಿ ಬಿಟ್ಟ ವಿಷಯವಿದೆ.

ಶಾಸನದಲ್ಲಿ ಭಾರದ್ವಾಜ ಗೋತ್ರದ ದಾಸಿರಾಜನ ವಂಶಾವಳಿಯನ್ನು ಹೇಳುವುದಕ್ಕಿಂತ ಮೊದಲು – ಹಿಂದಿನ ಶಾಸನಕ್ಕಿಂತ ಈ ಶಾಸನದಲ್ಲಿ ಹೆಚ್ಚಿನ ವಿವರಗಳಿವೆ - ಹೂಲಿಯನ್ನು, ಹೂಲಿಯ ಸಾವಿರ ಮಹಾಜನರನ್ನು, ಹೂಲಿಯ ಒಂದು ಭಾಗವಾಗಿದ್ದ ಶಿವೆಯಗೇರಿಯ ನೂರು ಮಹಾಜನರನ್ನು ಪದ್ಯಗಳಲ್ಲಿ ವರ್ಣಿಸುತ್ತದೆ.

 


 

ಪದ್ಯ ೧:

ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿರುವ ಈ ಪದ್ಯ ಹೂಲಿಯನ್ನು ವರ್ಣಿಸುತ್ತದೆ. ಇದರ ಮೊದಲ ಎರಡು ಸಾಲುಗಳು ಹಿಂದಿನ ಶಾಸನದ ಮೊದಲ ಪದ್ಯದಂತೆಯೇ ಇವೆ.

ರಾಮಾರಾಮ ವಿಕೀರ್ಣದಿಂ ನಿಖಿಲ ದೇವಾನೀಕದಿಂ ಋಗ್ಯಜು 

ಸ್ಸಾಮಾಥರ್ವಣವೇದಶಾಸ್ತ್ರನಿವಹ ಪ್ರಖ್ಯಾತ ಸಾಸಿರ್ವರಿಂ

ಕಾಮೋದ್ದಾಮ ಗಜಂಗಳಂತಿರೆಸೆವಾ ವಾರಾಂಗನಾನೀಕದಿಂ

ಶ್ರೀಮತ್ಪೂಲಿ ನಿರಂತರಂ ಸೊಗಯಿಕುಂ ಸತ್ಸೇವ್ಯ ಸಂಪತ್ತಿಯಿಂ

 

ʼಸೊಗಯಿಸುʼ ಎಂದರೆ ಶೋಭಿಸು. ʼಸೇವ್ಯʼ ಎಂದರೆ ಪೂಜ್ಯ.

 

ಪದ್ಯದ ಅರ್ಥವನ್ನು ಹೀಗೆ ಹೇಳಬಹುದು – “ಮನೋಹರವಾದ ಸುಖದಿಂದ ತುಂಬಿ, ದೇವಗಣಗಳಿಂದ, ಚತುರ್ವೇದ ಪರಿಣಿತರಿಂದ, ಕಾಮನ ಮದ್ದಾನೆಗಳಂತಿರುವ ವಾರಾಂಗನೆಯರ ಗುಂಪಿನಿಂದ, ಪೂಜ್ಯ ಸಂಪತ್ತಿನಿಂದ ಶ್ರೀಮತ್‌ ಪೂಲಿ ನಿರಂತರವಾಗಿ ಶೋಭಿಸುತ್ತಿತ್ತು.”

 

 

ಪದ್ಯ ೨:

ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿ ಹೂಲಿಯ ಸಾವಿರ ಮಹಾಜನರನ್ನು ಈ ಪದ್ಯ ವರ್ಣಿಸುತ್ತದೆ.

ಶ್ರೀ ರಾಮಾಯಣ ಭಾರತಾದಿ ಮನು ಚಾರಿತ್ರಂಗಳ ವ್ಯಾಪ್ತಿಯೊಳ

ಸಾರಾಸಾರ ವಿಚಾರ ತರ್ಕ ನಿಚಯ ಪ್ರಖ್ಯಾತ ಶಾಸ್ತ್ರಂಗಳೊಳ್

ಶೂರರ್ ವೇದ ಸಮೂಹದೊಳ್ ಸಕಲ ತತ್ವಜ್ಞಾನ ಸಂಪತ್ತಿಂ

ದಾರಾಧ್ಯ‌ರ್ ಧರೆಗೆಂದೊಡಿಂ ಪಿರಿಯರಾರ್ ಸಾಸಿರ್ವರಿಂದುರ್ವಿಯೊಳ್‌ ||

 

ʼನಿಚಯʼ ಎಂದರೆ ಸಮೂಹ ಎಂದರ್ಥ. ʼಉರ್ವಿʼ ಎಂದರೆ ಭೂಮಿ.

 

ಪದ್ಯದ ಅರ್ಥವನ್ನು ಹೀಗೆ ಹೇಳಬಹುದು: “ಶ್ರೀ ರಾಮಾಯಣ, ಭಾರತ,ಮನು ಚಾರಿತ್ರಗಳಲ್ಲಿ, ಸಕಲ ವಿಚಾರ-ತರ್ಕ ಶಾಸ್ತ್ರಗಳಲ್ಲಿ ಅವರು ಶೂರರು, ವೇದ ಸಮೂಹಗಳಲ್ಲಿ, ಸಕಲ ತತ್ವಜ್ಞಾನ ಸಂಪತ್ತಿನಿಂದ ಜಗತ್ತಿಗೆ ಅವರು ಆರಾಧ್ಯರು, ಸಾವಿರ ಮಹಾಜನರಿಗಿಂತ ಭೂಮಿಯಲ್ಲಿ ಯಾರು ದೊಡ್ಡವರು ?”

 

ಪದ್ಯ ೩:

ಇದು ಹೂಲಿಯ ಓಣಿಯಾದ ಶಿವೆಯಗೇರಿಯ ನೂರು ಮಹಾಜನರನ್ನು ವರ್ಣಿಸುವ ಕಂದಪದ್ಯ.

ಕವಿ ಗಮಕಿ ವಾದಿ ವಾಗ್ಮಿ

ಳವಿವೇಕದ ದೆಸೆಯನರಿಯರಾಶ್ರಿತ ಜನಮು

ತ್ಸವದಿಂ ಬೇಡಲ್ಕೀವರ್

ಸವಿಲಾಸಿಗಳಲ್ತೆ ಶಿವೆಯಗೇರಿಯ ನೂರ್ವ‌ರ್

 

ಪದ್ಯದ ಅರ್ಥ : “ಕವಿ-ಗಮಕಿ-ವಾದಿ-ವಾಗ್ಮಿಗಳಾಗೋದು ಬೇಡ, ಅವರ ದೆಸೆಯನ್ನು ಕೂಡ ಅರಿಯದ ಆಶ್ರಿತರು ಉತ್ಸಾಹದಿಂದ ಕೇಳಿದರೆ, ಕೇಳಿದ್ದನ್ನು ಕೊಟ್ಟು ಬಿಡುವರು, ಸವಿಲಾಸಿಗಳಲ್ಲವೇ ಶಿವೆಯಗೇರಿಯ ನೂರು ಮಹಾಜನರು ?”

ಉಪಸಂಹಾರ:

ಹೂಲಿಯ ಶಾಸನ ಪದ್ಯಗಳಲ್ಲಿ ಕವಿಗಳು ತಮ್ಮ ಪ್ರೌಢ ಕವಿತ್ವದ ಪ್ರದರ್ಶನ ಮಾಡಿದ್ದಾರೆ. ಹಾಳು ಸುರಿವ ಗುಡಿಗಳಲ್ಲಿರುವ ಈ ಶಾಸನ ಕಲ್ಲುಗಳಲ್ಲಿ ಇಷ್ಟೊಂದು ಕಾವ್ಯ ಸಂಪತ್ತು ಅಡಗಿದೆಯಲ್ಲ ಎಂದು ಅಚ್ಚರಿಯಾಗುತ್ತದೆ. ನಿರಾಸೆಯ ವಿಷಯವೆಂದರೆ ಈ ಪದ್ಯಗಳ ಕವಿಗಳು ತಮ್ಮ ಹೆಸರು ಹೇಳಿಕೊಳ್ಳದೆ ಅನಾಮಿಕರಾಗಿ ಉಳಿದಿರುವುದು.

ಎರಡು ಭಾಗಗಳ ಈ ಬರಹದಲ್ಲಿ ಒಟ್ಟು ಏಳು ಶಾಸನಗಳ ಹತ್ತೊಂಬತ್ತು ಪದ್ಯಗಳನ್ನು ಚರ್ಚಿಸಲಾಗಿದೆ. ಈ ಶಾಸನಗಳಲ್ಲಿ ಮತ್ತು ಇತರ ಶಾಸನಗಳಲ್ಲಿ ಇನ್ನಷ್ಟು ಪದ್ಯಗಳಿವೆ. ಕಾವ್ಯಾಸಕ್ತರು ಉಳಿದ ಪದ್ಯಗಳನ್ನೂ ಗಮನಿಸಬೇಕಾಗಿ ವಿನಂತಿ.


ಆಧಾರ:

·          Epigraphia Indica Vol 18 : ಶಾಸನ ಸಂಖ್ಯೆ - ೨೨ ಇ,ಎಫ್‌, ಎಲ್‌ ಮತ್ತು ಎಮ್.

·         ಶಾಸನ ಪದ್ಯ ಸಿರಿ – ಸಂಪುಟ ೧ (ಸಂಪಾದಕರು : ಶ್ರೀ ಕೆ.ಆರ್.‌ ಗಣೇಶ ಮತ್ತು ಶ್ರೀ ದೇವರಕೊಂಡಾರೆಡ್ಡಿ)

·         ಕ.ಸಾ.ಪ ಕನ್ನಡ ನಿಘಂಟು (ಸಂಪುಟ ೧-೮)

 

ಕಠಿಣ ಪದಗಳ ಅರ್ಥ

ವನಧಿ = ಕಡಲು

ನಿಮಿಷರಾಜ= ಇಂದ್ರ

ವನೀಚಕ್ರ =ಭೂಮಂಡಲ

ಆರಮೆ = ಉದ್ಯಾನ

ಸಹಕಾರ = ಮಾವಿನ ಹಣ್ಣು

ಅಳಿನಿ = ಜೇನ್ನೊಣ

ವಣ್ಣಿಪುದು = ಬಣ್ಣಿಸುವುದು

ಪಾದಯುಗ = ಜೋಡಿಪಾದಗಳು

ಭಾಸುರ = ಪ್ರಕಾಶಮಾನವಾದ;

ಸಾರ = ಮೆಟ್ಟಿಲು

ಬಿದಿ = ಸೃಷ್ಟಿಕರ್ತ

ತರುಂಬಿ = ಅಡ್ಡಬಂದು ನಿಲ್ಲಿಸಿ

ಶಾತಕುಂಭ = ಹೊನ್ನು

ಕಾರ್ಮುಕ= ಮಳೆಗಾಲದ ಆರಂಭ

ಮಹೀದೇವ‌ರು = ಭೂಸುರರು,ಬ್ರಾಹ್ಮಣರು

ಪ್ರಸ್ತುತ = ಹೊಗಳಿದ, ಪ್ರಶಂಸಿಸಿ

ಅಶೇಷ = ಶೇಷವಿಲ್ಲದಿರುವ, ಸಮಸ್ತವಾಗಿರುವ

ಆಶಾ = ದಿಕ್ಕು

ಸಮಾಕೀರ್ಣ= ತುಂಬಿದುದು; ಹರಡಿದುದು :

ವರ್ಣವಿಳಾಸತೆ= ಶಬ್ದಸೌಂದರ್ಯ

ಸಂಸೇವ್ಯ = ಸೇವಿಸಲು ತಕ್ಕುದಾದ ; ಸೇವೆಗೆ ಯೋಗ್ಯವಾದ, ಪೂಜಿಸಲು ತಕ್ಕುದಾದ

ವಿದಿತ = ಬಲ್ಲ,ತಿಳಿದ,ಪ್ರಸಿದ್ಧವಾದ

ರಾಮ= ೧. ಮನೋಹರವಾದು̧ದು ಆನಂದಕರವಾದದು. ೨. ಕತ್ತಲೆಯ ಬಣ್ಣ. ೩. ಬಿಳಿಯ ಬಣ್ಣ. ೪. ಪ್ರಿಯ. ೫. ವಿಷ್ಣುವಿನ ಆರನೆಯ ಅವತಾರ. ೬. ವಿಷ್ಣುವಿನ ಎಂಟನೆಯ ಅವತಾರವಾದ ಶ್ರೀಕೃಷ್ಣನ ಅಣ್ಣ.

ಆರಾಮ = ೧. ಸುಖಕರವಾದುದು, ರಮ್ಯವಾದುದು: ೨. ಉದ್ಯಾನವನ, ತೋಟ

ವಿಕೀರ್ಣ= ಆವರಿಸಿದ, ತುಂಬಿದ

ನಿಖಿಲ = ಎಲ್ಲ

ಅನೀಕ = ಗುಂಪು

ಕೊಟ್ಟಜ = ಕಪ್ಪ

ಏಮಾತು = ಏನು ಮಾತು; ಇನ್ನೇನು ಮಾತು

ಸಲೆ = ಒಂದೇ ಸಮನೆ; ಚೆನ್ನಾಗಿ, ಲೇಸಾಗಿ, ಪೂರ್ಣ

ನೀರದ = ಮಳೆಯ ಮೋಡ

ಅಂಘ್ರಿಪ = ಮರ, ಅಮರಾಂಘ್ರಿಪ = ದೇವಲೋಕದ ಮರ, ಕಲ್ಪವೃಕ್ಷ.

ಉದ್ವೃತ್ತ = ಕೊಬ್ಬಿದ

ವಿಭವ = ಐಶ್ವರ್ಯ ; ಸಿರಿ ; ಸಂಪತ್ತು , ಶಕ್ತಿ ; ಬಲ,. ಹಿರಿಮೆ ; ಘನತೆ

ಪಡಿಪಾಟು = ಸಮಾನ , ಸಾಟಿ

ಪಾಸಟಿ = ಸರಿ; ಸಾಟಿ; ಸಮ